ಇನ್ನು ಕಡೆಯಲ್ಲಿ ಎರಡು ಬಿಡಿಯಾದ
ಮಂತ್ರಗಳನ್ನು ಉದಾಹರಿಸುತ್ತಾರೆ. ಈ ಮಂತ್ರಗಳಲ್ಲಿ ಮಧ್ವ ಎಂಬ ನಾಮವು ಗೋಚರಿಸುವುದು ವಿಶೇಷ.
ಮೊದಲ ಮಂತ್ರ:
"ವಿಷ್ಣೋರ್ನು ಕಮ್", ಎಂದು ಆರಂಭವಾಗುವ ಆರು ಮಂತ್ರಗಳ
ವಿಷ್ಣುಸೂಕ್ತವು ದೀರ್ಘತಮಸ್ ಎಂಬ ಋಷಿಯಿಂದ ಬಂದದ್ದು. ತ್ರಿಷ್ಟುಪ್ ಛಂದಸ್ಸು. ಆರು ಮಂತ್ರಗಳಲ್ಲಿ ಈ ಮಂತ್ರವು ಐದನೆದ್ದು.
ತದಸ್ಯ ಪ್ರಿಯಮಭಿ ಪಾಥೋ ಅಶ್ಯಾಂ ನರೋ ಯತ್ರ ದೇವಯವೋ ಮದಂತಿ ।
ಉರುಕ್ರಮಸ್ಯ ಸ ಬಂಧುರಿತ್ಥಾ ವಿಷ್ಣೋಃ ಪದೇ ಪರಮೇ ಮಧ್ವ ಉತ್ಸಃ ॥
ನನ್ನ ಗುರು ಆನಂದತೀರ್ಥನಿಂದ
ಆವಿಷ್ಕೃತವಾದ ಆ ಮಹಾವಿಷ್ಣುವಿನ ಪ್ರಿಯವಾದ ಹಾದಿಯನ್ನು,
ವೈಷ್ಣವಪದವನ್ನು ಹೊಂದುವೆ! ಅಲ್ಲೇ
ಅಲ್ಲವೇ ಹರಿಯನ್ನು ಬಯಸುವ ಸಕಲ ಸಾತ್ವಿಕರು ಸ್ವರೂಪಾನಂದವನ್ನು ಅನುಭವಿಸುತ್ತಾರೆ! ಉರುಕ್ರಮನ
ನಿಜತತ್ವವನ್ನು ಸಾರಿದ ಮಧ್ವನೆ ಅಲ್ಲವೇ ಹರಿಯ ಆತ್ಮಬಂಧು. ಆ ಮಹಾವಿಷ್ಣುವಿನ ಹಿರಿದಾದ ತಾಣದಲ್ಲಿ
ಇವನೇ ಎಲ್ಲರಿಗಿಂತಲೂ ಮೇಲೇರಿದವ, ಅಲ್ಲಿ ಎಲ್ಲರಿಗೂ ಮೀರಿದ ಆನಂದವನ್ನು
ಅನುಭವಿಸುವವ.
ಎರಡನೇ ಮಂತ್ರ:
"ಏಕಃ ಸಮುದ್ರಃ", ಎಂದು ಆರಂಭವಾಗುವ ಹತ್ತನೇ ಮಂಡಲದ
ಏಳು ಸೂಕ್ತಗಳ ದೇವತೆಯು ಪ್ರಾಣಾಗ್ನಿ. ಕಂಡ ಋಷಿ ತ್ರಿತ. ಛಂದಸ್ಸು ತ್ರಿಷ್ಟುಪ್. ಏಳರಲ್ಲಿ ಇದು
ಐದನೇ ಮಂತ್ರ:
ಸಪ್ತ ಸ್ವಸೃರರುಷೀರ್ವಾವಶಾನೋ ವಿದ್ವಾನ್ ಮಧ್ವ ಉಜ್ಜಭಾರಾ ದೃಶೇ ಕಮ್ ।
ಅಂತರ್ಯೇಮೇ ಅಂತರಿಕ್ಷೇ ಪುರಾಜಾ ಇಚ್ಚನ್ ವವ್ರಿಮವಿದತ್ ಪೂಷಣಸ್ಯ ॥
ತತ್ವವನ್ನು ಜಗತ್ತಿನಲ್ಲಿ
ಪ್ರಕಟಿಸಬೇಕು ಎಂಬ ಅಭಿಲಾಷೆಯಿಂದ, ವಿದ್ವಾನ್ ಮಧ್ವನು, ಆನಂದವನ್ನು ಕರೆವಂಥಾ, ಸ್ವತಂತ್ರನಾದ ಬ್ರಹ್ಮನನ್ನು
ಪ್ರತಿಪಾದಿಸುವ ಸಪ್ತಮಹಾವಿದ್ಯೆಗಳನ್ನು ತನ್ನ ಮುದ್ದಾದ ವ್ಯಾಖ್ಯಾನದಿಂದ ಉದ್ಧರಿಸಿದ, ಸುಜನರಿಗೆಲ್ಲಾ ಸತ್ಯದ ದರ್ಶನವಾಗಲಿ
ಎಂಬ ಇಚ್ಛೆಯಿಂದ!
ಇವನು ನಮ್ಮ ದೇಹವೆಂಬ ಪುರದಲ್ಲಿ
ನಮ್ಮೊಂದಿಗೆ ಹುಟ್ಟುವ ತಾತ್ವಿಕರ ಹೃದಯದೊಳಗಾಡುವ ಹಿರಿಯ ದೈವ! ಇವನನ್ನು ಸಲಹುವ, ಪೂರ್ಣಜ್ಞಾನಬಲರೂಪನಾದ ವಿಷ್ಣುವಿನ
ಗುಣಗಡಣವನ್ನು ಅವನ ಪ್ರೇರಣೆಯಿಂದಲೇ ಚೆನ್ನಾಗಿ ತಿಳಿದವನು,
ಚೆನ್ನಾಗಿ ತಿಳಿಸುವವನು.
No comments:
Post a Comment