ಮುಂದೆ ಯುದ್ಧಕಾಂಡ –
ನಿಬಧ್ಯ ಸೇತುಂ ರಘುವಂಶ-ಕೇತು-ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ ।
ಮುಷ್ಟಿ-ಪ್ರಹಾರಂ ದಶಕಾಯ ಸೀತಾ-ಸಂತರ್ಜನಾಗ್ರ್ಯೋತ್ತರಮೇಷಕೋsದಾತ್ ॥೦೧.೧೭॥
ರಘುವಂಶದ ಕೀರ್ತಿಸ್ಥಂಭ ಶ್ರೀರಾಮ
(ರಘುವಂಶ-ಕೇತು). ಅವನ ಕುಡಿನೋಟಕ್ಕೆ ಬೆದರಿ ಬೆಚ್ಚಿದ ಸಮುದ್ರನ ಮಧ್ಯೆ ಬಿಗಿದನಿವನು
ಸೇತುವೆಯನ್ನು! (ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ ನಿಬಧ್ಯ ಸೇತುಂ).
ಸೀತೆಯನ್ನು ಬೆದರಿಸಿದ ಸೇಡಿಗೆ ತಕ್ಕ
ಉತ್ತರವಾಗಿ ಬಿಗಿದು ಕೊಟ್ಟ ಹತ್ತುತಲೆಯ ರಾವಣನಿಗೆ ತನ್ನ ಮುಷ್ಟಿಯಿಂದ!
ಸಂತರ್ಜನ ಎಂದರೆ ಬೆದರಿಸುವುದು, ಗದರಿಸುವುದು ಎಂದು ಅರ್ಥ.
ತನ್ನ ತಂದೆಯ ಭಾಷೆಯನ್ನೇ
ಅನುಕರಿಸಿದಂತಿದೆ ಕವಿ. ತ್ರಿವಿಕ್ರಮ ಪಂಡಿತರೂ ಇದೇ ಮಾತನ್ನು ವಾಯುಸ್ತುತಿಯಲ್ಲಿ ಆಡಿದರು -
‘ದೃಷ್ಟ್ವಾ ದುಷ್ಟಾಧಿಪೋರಃ
ಸ್ಫುಟಿತಕನಕಸದ್ವರ್ಮ ಘೃಷ್ಟಾಸ್ಥಿಕೂಟಂ ನಿಷ್ಪಿಷ್ಟಮ್’ ಎಂದು.
‘ಹನುಮನ ಗುದ್ದಿಗೆ, ಪುಟಕಿಟ್ಟ ಚಿನ್ನದ ಕವಚವನ್ನು
ತೊಟ್ಟಿದ್ದ, ದುಷ್ಟರ ದೊರೆಯಾದ ರಾವಣನ ಎದೆಗೂಡಿನ ಎಲಬುಗಳು ಪುಡಿಯಾದವು!’
ರಾಮನಿಗೆ ಸಮುದ್ರವೇಕೆ ಹೆದರಿತು?
ದಕ್ಷಿಣಸಾಗರದ ತೀರಕೈತಂದ ವಾನರಸೇನೆ
ಅಲ್ಲೇ ನಿಂತಿತು, ರಾಮ ಜಗತ್ತಿಗೆ ತೋರಬಯಸಿದ ಲೀಲೆಗೆ ಸಾಕ್ಷಿಯಾಗಿ. ಮುಂದೆಸಾಗುವ ಮುನ್ನ
ಸಮುದ್ರನ ಅನುಮತಿಯನ್ನು ಬೇಡಿ ಅಲ್ಲೇ ತಂಗಿದರು ಎಲ್ಲಾ.
ಮೂರು ರಾತ್ರಿಗಳಾದರೂ ಸಮುದ್ರ
ಅಲೆಯನ್ನು ಬಿಟ್ಟು ಏಳಲಿಲ್ಲ. ರಾಮನು ಕ್ರೋಧಗೊಂಡ ತನ್ನ ಕುಡಿನೋಟದಿಂದ ಸಮುದ್ರವನ್ನು
ಶೋಷಿಸಿಬಿಡುವಂತೆ ಇರುವಾಗಲೇ ಎಲ್ಲರಿಗೂ ಕಾಣುವಂತೆ ಮಾನಿಸನ ರೂಪಹೊತ್ತು ಬಂತು ಸಾಗರ.
ಇಲ್ಲಿ ಭ್ರೂಭಂಗ-ಸಂಭ್ರಾಂತ ಎಂದು
ಕವಿ ಅಂದದ್ದನ್ನೆ, ಹನುಮನು ‘ಕ್ರೋಧದೀಪ್ತನಯನಾಂತಹತಃ’[1], ಎಂದು ಕಂಡು ನುಡಿದ.
ಛಂದಸ್ಸು ‘ಕೀರ್ತಿ’ ಎಂಬ ಉಪಜಾತಿಯ
ಪ್ರಭೇದ.
ರಾಘವನ ಕೀರ್ತಿಯನ್ನು ಜಗತ್ತಿಗೆ
ಸಾರಿದ ಸಾಗರನ ನಡೆಯು.
[1] ಮಹಾಭಾರತ ತಾತ್ಪರ್ಯ ನಿರ್ಣಯ ೮.೧೦