ಮಧ್ವವಿಜಯ

'ಶ್ರೀಮಧ್ವವಿಜಯ' ಆಚಾರ್ಯ ಮಧ್ವರ ಜೀವನ ಚರಿತ್ರೆ. ಇದೊಂದು ಅಧಿಕೃತ ದಾಖಲೆ. ಆಚಾರ್ಯಮಧ್ವರ ಸಮಕಾಲಿನವರು, ಆಚಾರ್ಯರನ್ನು ಕಣ್ಣಾರೆ ಕಂಡವರು ಬರೆದಿಟ್ಟ ದಾಖಲೆ.
ಇದು ಕೇವಲ ಐತಿಹಾಸಿಕ ದಾಖಲೆ ಮಾತ್ರವಲ್ಲ, ಇದು ಪಾಶ್ಚಾತ್ಯ ಕಲ್ಪನೆಯ 'ಬಯಾಗ್ರಪಿ' ಅಲ್ಲ. ಇದು ಕಾವ್ಯವೂ ಹೌದು, ಇತಿಹಾಸವೂ ಹೌದು. ಇಂತಹ ಐತಿಹಾಸಿಕಕಾವ್ಯದ ಕನ್ನಡ ವಿವರಣೆಯನ್ನು ನೀಡುವ ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ.

Our contact: Use Contact form provided at the end of this page
PDF copy will be made available after completing each Sarga

Friday, April 19, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೭


ಮುಂದೆ ಯುದ್ಧಕಾಂಡ –


ನಿಬಧ್ಯ ಸೇತುಂ ರಘುವಂಶ-ಕೇತು-ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ
ಮುಷ್ಟಿ-ಪ್ರಹಾರಂ ದಶಕಾಯ ಸೀತಾ-ಸಂತರ್ಜನಾಗ್ರ್ಯೋತ್ತರಮೇಷಕೋsದಾತ್ ॥೦೧.೧೭  

ರಘುವಂಶದ ಕೀರ್ತಿಸ್ಥಂಭ ಶ್ರೀರಾಮ (ರಘುವಂಶ-ಕೇತು). ಅವನ ಕುಡಿನೋಟಕ್ಕೆ ಬೆದರಿ ಬೆಚ್ಚಿದ ಸಮುದ್ರನ ಮಧ್ಯೆ ಬಿಗಿದನಿವನು ಸೇತುವೆಯನ್ನು! (ಭ್ರೂಭಂಗ-ಸಂಭ್ರಾಂತ-ಪಯೋಧಿ-ಮಧ್ಯೇ ನಿಬಧ್ಯ ಸೇತುಂ).
ಸೀತೆಯನ್ನು ಬೆದರಿಸಿದ ಸೇಡಿಗೆ ತಕ್ಕ ಉತ್ತರವಾಗಿ ಬಿಗಿದು ಕೊಟ್ಟ ಹತ್ತುತಲೆಯ ರಾವಣನಿಗೆ ತನ್ನ ಮುಷ್ಟಿಯಿಂದ!
ಸಂತರ್ಜನ ಎಂದರೆ ಬೆದರಿಸುವುದು, ಗದರಿಸುವುದು ಎಂದು ಅರ್ಥ.
ತನ್ನ ತಂದೆಯ ಭಾಷೆಯನ್ನೇ ಅನುಕರಿಸಿದಂತಿದೆ ಕವಿ. ತ್ರಿವಿಕ್ರಮ ಪಂಡಿತರೂ ಇದೇ ಮಾತನ್ನು ವಾಯುಸ್ತುತಿಯಲ್ಲಿ ಆಡಿದರು -
‘ದೃಷ್ಟ್ವಾ ದುಷ್ಟಾಧಿಪೋರಃ ಸ್ಫುಟಿತಕನಕಸದ್ವರ್ಮ ಘೃಷ್ಟಾಸ್ಥಿಕೂಟಂ ನಿಷ್ಪಿಷ್ಟಮ್’ ಎಂದು.
‘ಹನುಮನ ಗುದ್ದಿಗೆ, ಪುಟಕಿಟ್ಟ ಚಿನ್ನದ ಕವಚವನ್ನು ತೊಟ್ಟಿದ್ದ, ದುಷ್ಟರ ದೊರೆಯಾದ ರಾವಣನ ಎದೆಗೂಡಿನ ಎಲಬುಗಳು ಪುಡಿಯಾದವು!’
ರಾಮನಿಗೆ ಸಮುದ್ರವೇಕೆ ಹೆದರಿತು?
ದಕ್ಷಿಣಸಾಗರದ ತೀರಕೈತಂದ ವಾನರಸೇನೆ ಅಲ್ಲೇ ನಿಂತಿತು, ರಾಮ ಜಗತ್ತಿಗೆ ತೋರಬಯಸಿದ ಲೀಲೆಗೆ ಸಾಕ್ಷಿಯಾಗಿ. ಮುಂದೆಸಾಗುವ ಮುನ್ನ ಸಮುದ್ರನ ಅನುಮತಿಯನ್ನು ಬೇಡಿ ಅಲ್ಲೇ ತಂಗಿದರು ಎಲ್ಲಾ.
ಮೂರು ರಾತ್ರಿಗಳಾದರೂ ಸಮುದ್ರ ಅಲೆಯನ್ನು ಬಿಟ್ಟು ಏಳಲಿಲ್ಲ. ರಾಮನು ಕ್ರೋಧಗೊಂಡ ತನ್ನ ಕುಡಿನೋಟದಿಂದ ಸಮುದ್ರವನ್ನು ಶೋಷಿಸಿಬಿಡುವಂತೆ ಇರುವಾಗಲೇ ಎಲ್ಲರಿಗೂ ಕಾಣುವಂತೆ ಮಾನಿಸನ ರೂಪಹೊತ್ತು ಬಂತು ಸಾಗರ.
ಇಲ್ಲಿ ಭ್ರೂಭಂಗ-ಸಂಭ್ರಾಂತ ಎಂದು ಕವಿ ಅಂದದ್ದನ್ನೆ, ಹನುಮನು ‘ಕ್ರೋಧದೀಪ್ತನಯನಾಂತಹತಃ[1], ಎಂದು ಕಂಡು ನುಡಿದ.
ಛಂದಸ್ಸು ‘ಕೀರ್ತಿ’ ಎಂಬ ಉಪಜಾತಿಯ ಪ್ರಭೇದ.
ರಾಘವನ ಕೀರ್ತಿಯನ್ನು ಜಗತ್ತಿಗೆ ಸಾರಿದ ಸಾಗರನ ನಡೆಯು.




[1] ಮಹಾಭಾರತ ತಾತ್ಪರ್ಯ ನಿರ್ಣಯ ೮.೧೦


Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೬


ಅಪಕ್ಷಪಾತೀ ಪುರುಷಸ್ತ್ರಿಲೋಕ್ಯಾಮ್-ಅಭೋಗ-ಭೋಕ್ತಾ ಪತಗಾಧಿ-ರಾಜಮ್
ವಿಶ್ವಮ್ಭರಂ ಬಿಭ್ರದಸೌ ಜಿಗಾಯ ತ್ವರಾ-ಪರಾಕ್ರಾಂತಿಷು ಚಿತ್ರಮೇತತ್ ॥೦೧.೧೬    

ಇವನು ವೇಗ ಹಾಗೂ ಪರಾಕ್ರಮದಲ್ಲಿ ಗರುಡನನ್ನೇ ಗೆದ್ದ ಗಂಡು!
ವಿಚಿತ್ರ! ಲೋಕದಲ್ಲಿ ಹಾರುವ ಹಕ್ಕಿಯನ್ನು ನಡೆವ ಪುರುಷನು ಗೆದ್ದದ್ದು!
ಇದಾದರೋ ಬರಿಯ ನಾಡು ಹಕ್ಕಿಯಲ್ಲ. ಹಕ್ಕಿಗಳ ರಾಜ (ಪತಗಾಧಿರಾಜಮ್)
ಇವನೋ ಒಂದು ಕಪಿ. ಗರುಡನನ್ನು ಹೇಗೆ ಗೆದ್ದ!?

ಗರುಡನಾದರೋ ‘ಪಕ್ಷಪಾತಿ’ (ಪಕ್ಷಗಳ ಸಹಾಯದಿಂದ ಹಾರುವ), ಆದರೆ ಇವನು ಪಕ್ಷಪಾತವಿಲ್ಲದ ಗಂಡು(ಅಪಕ್ಷಪಾತೀ ಪುರುಷಃ).  ನುಗ್ಗಿದ್ದು ವೈರಿಯ ರಾಜ್ಯಕ್ಕೆ, ಆದರೂ ಮಂಡೋದರಿ, ವಿಭೀಷಣರೇ ಮೊದಲಾದವರನ್ನು ಹಾಳು ಮಾಡದೆ, ಅವರವರ ಯೋಗ್ಯತೆಯನ್ನು ತಿಳಿದು, ಗುಣಕ್ಕೆ ತಕ್ಕ ನಡೆಯನ್ನು ತೋರಿ, ಹಾಳುಗೆಡಬೇಕಾದ್ದನ್ನು ಹಾಳು ಮಾಡಿ ಬಂದ! ಮೂರುಲೋಕದಲ್ಲಿ ಇವನಿಗೆ ಸಮನಾದ ‘ಅಪಕ್ಷಪಾತೀ’ ಯಾರಿದ್ದಾರೆ?!
ಮತ್ತೆ, ಗರುಡನಾದರೋ ಭೋಗಗಳನ್ನು ತಿಂದು ಬದುಕುವನು. ಭೋಗ ಎಂದರೆ ಹಾವಿನ ದೇಹ. ಆದ್ದರಿಂದ ಗರುಡ ‘ಭೋಗಭೋಕ್ತಾ’.
ಹನುಮನಾದರೋ ಭೋಗವನ್ನು ತೊರೆದ ಬ್ರಹ್ಮಚಾರಿ! ಆದರಿಂದ ಇವನು ‘ಅಭೋಗಭೋಕ್ತಾ’ !
ಇವನೂ ಗರುಡನಂತೆ ವಿಶ್ವವನ್ನು ಹೊತ್ತ ಸ್ವಾಮಿಯನ್ನು ಹೆಗಲಲ್ಲಿ ಹೊತ್ತಿರುವನು!
ನಿಜ ಸಂಗತಿ ಇದು - ಇವನು ಮೂಲತಃ ಗರುಡನಿಗಿಂತ ಮೇಲಿನ ಯೋಗ್ಯತೆಯ ದೇವತೆ ಮುಖ್ಯಪ್ರಾಣ. ವಿಚಾರಿಸಿ ನೋಡಿದರೆ ಇದಾವುದೂ ವಿಚಿತ್ರವಲ್ಲ. ನೋಡುವ ಕಣ್ಣಿಗೆ ಇದೊಂದು ವಿಚಿತ್ರ ಅಷ್ಟೇ!
ಇಲ್ಲಿ ಮತ್ತೆ ನಾವು ಸ್ವಲ್ಪ ಶ್ಲೇಷವನ್ನು ತಿಳಿಯುವ ಪ್ರಯತ್ನ ಮಾಡುವ.
ಇಲ್ಲಿ ಬಂದ ಅಪಕ್ಷಪಾತೀ, ಅ- ಭೋಗಭೋಕ್ತಾ ಹಾಗೂ ವಿಶ್ವಮ್ಭರಂ ಬಿಭ್ರದ್ ಈ ಶಬ್ದಗಳು ಪಾತ್ರಕ್ಕೆ ತಕ್ಕಂತೆ ವಾಕ್ಯಕ್ಕೆ ಹೊಸ ಅರ್ಥವನ್ನು ಕೊಟ್ಟವು.
ಕವಿಯ ಚಾತುರ್ಯಕ್ಕೆ ನಮನ.
ಛಂದಸ್ಸು ಪ್ರೇಮಾ ಎಂಬ ಉಪಜಾತಿಪ್ರಭೇದ.
ಇದು, ಮರಳಿದ ಹನುಮನಿಗೆ ಏನನ್ನೂ ಕೊಡಲು ಕಾಣದೆ ತನ್ನನ್ನೇ ಕೊಟ್ಟುಕೊಂಡ ರಾಮನ ಅನಿಮಿತ್ತಪ್ರೇಮ.
ತಾನು ಗರುಡನನ್ನೇ ಗೆದೆವ ತಾಕತ್ತಿನ ವೀರ, ಸ್ವಾಮಿಯ ಮುಂದೆ ತಲೆಬಾಗಿ ನಿಂತು ಭಕ್ತಿಯಲ್ಲಿ ತೋದ ಕುವರ. ಇದೇ  ದಾಸ ಈಶರ ಸಮಾಗಮ.

Tuesday, April 16, 2019

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೫


ಇಡಿಯ ಸುಂದರಕಾಂಡವನ್ನು ಕವಿ ಇಲ್ಲಿ ಕಟ್ಟಿಕೊಡುವ –

ಗೋಭಿಃ ಸಮಾನಂದಿತ-ರೂಪಸೀತಃ ಸ್ವವಹ್ನಿ-ನಿರ್ದಗ್ಧ-ಪಲಾಶಿ-ರಾಶಿಃ ।
ಅಹೋ ಹನೂಮನ್ನವ-ವಾರಿದೋsಸೌ ತೀರ್ಣಾಂಬುಧಿರ್ವಿಷ್ಣು-ಪದೇ ನನಾಮ ॥೦೧.೧೫॥  

ತನ್ನ ಮೆದುನುಡಿಗಳಿಂದ (ಪನ್ನೀರಿನಿಂದ) ಸೀತೆಯನ್ನು (ಸಸಿಗಳನ್ನು) ಸಂತೈಸಿ,
ಬಾಲದ ಬೆಂಕಿಯಿಂದ (ಮಿಂಚಿನ ಕಿಡಿಯಿಂದ) ಮಾಂಸವನ್ನು ತಿನ್ನುವ ಕ್ರೂರ ರಕ್ಕಸರನ್ನು (ಎಲೆಗಳಿಂದ ತುಂಬಿದ ಮರಗಳನ್ನು) ಸುಟ್ಟು,
ಸಾಗರವನ್ನು ದಾಟಿ, ವಿಷ್ಣುಪಾದಕ್ಕೆ (ಆಗಸದಲ್ಲಿ) ಬಾಗಿತು ಈ ಹನುಮನೆಂಬೋ ಹೊಸದೊಂದು ಮೋಡ!

ಮತ್ತೆ ಕವಿಯ ಶ್ಲೇಷಚಾತುರ್ಯ!
ಒಂದು ವಾಕ್ಯದಲ್ಲಿ ಬರುವ ಶಬ್ದಗಳ ದೆಸೆಯಿಂದ ಮೂಡುವ ಅನೇಕಾರ್ಥದ ಸೊಬಗನ್ನು ಶ್ಲೇಷವೆಂದು ಕರೆವರು.
‘ಶ್ಲೇಷಃ ಸ ವಾಕ್ಯೇ ಏಕಸ್ಮಿನ್ ಯತ್ರಾನೇಕಾರ್ಥತಾ ಭವೇತ್’, ಎಂದ ಕಾವ್ಯಪ್ರಕಾಶಕಾರ.
ಇದೊಂದು ಅರ್ಥಾಲಂಕಾರ.
ಈ ಪದ್ಯವನ್ನೇ ನೋಡುವ - ಇಲ್ಲಿ ಬಂದಿರುವ ಗೋಭಿಃ, ಸೀತಾ, ಸ್ವವಹ್ನಿ, ಪಲಾಶಿ, ವಿಷ್ಣುಪದೇ ಎಂಬ ಶಬ್ದಗಳಿಗೆ ಎರಡು ಅರ್ಥಗಳು.
ಗೋ - ಮಾತು, ನೀರು.
ಸೀತಾ - (ಸೀರಜಾತಾ) ನೇಗಿಲಿನ ದೆಸೆಯಿಂದ ಹುಟ್ಟಿದ್ದು, ಸೀತಾ ಹಾಗೂ ಸಸಿಗಳು.
ಸ್ವವಹ್ನಿ- ಬಾಲದ ಕಿಡಿ ಹಾಗೂ ಮೋಡದ ಮಿಂಚು.
ಪಲಾಶಿ - ಪಲಾಶ ಎಂದರೆ ಎಲೆ. ಪಲಾಶಿ, ಎಲೆಗಳಿರುವ ಮರ. ಹಾಗೂ ಪಲ ಎಂದರೆ ಮಾಂಸ, ಅದನ್ನು ತಿನ್ನುವವ ಪಲಾಶಿ, ರಕ್ಕಸ.
ವಿಷ್ಣುಪದ - ವಿಷ್ಣುವಿನ ಪಾದ, ಆಕಾಶ.
ಮೋಡವೊಂದು ಹೇಗೆ ತನ್ನ ಮಳೆನೀರಿನಿಂದ (ಗೋಭಿಃ) ಸಸಿಗಳನ್ನು (ಸೀತಾ) ಬೆಳೆಸುವದೋ, ಮಿಂಚಿನ ಕಿಡಿಯಿಂದ (ಸ್ವವಹ್ನಿ) ಮರಗಳ ತೋಪನ್ನು (ಪಲಾಶಿ) ಸುಡುವುದೋ, ಹೇಗೆ ಆಗಸದಲ್ಲಿ (ವಿಷ್ಣುಪದೇ) ಸಾಗಿ ಹೋಗುವುದೋ, ಹಾಗೆಯೇ ಈ ಹನುಮನೆಂಬ ಹೊಸತೊಂದು ಮೋಡ, ತನ್ನ ನುಡಿಗಳಿಂದ (ಗೋಭಿಃ) ಸೀತೆಯನ್ನು ಸಂತೈಸಿದ, ತನ್ನ ಬಾಲದ ತುದಿಯ ಬೆಂಕಿಯಿಂದ (ಸ್ವವಹ್ನಿ) ರಕ್ಕಸರನ್ನು (ಪಲಾಶಿ) ಸುಟ್ಟ, ಸಾಗಿ ಬಂದು ವಿಷ್ಣುವಿನ ಪಾದಕ್ಕೆ ನಮಿಸಿದ.
ಏಕೆ ನಾವೀಗ ಶ್ಲೇಷೆಯ ಲಕ್ಷಣವನ್ನು ತಿಳಿದದ್ದು?
ಇದು ನಾರಾಯಣಪಂಡಿತರ ನೆಚ್ಚಿನ ಅಲಂಕಾರ ಎನ್ನಿಸುತ್ತೆ! ಈ ಕಾವ್ಯದಲ್ಲಿ ಬಹುಪಾಲು ಪದ್ಯಗಳು ಶ್ಲೇಷೆಯಲ್ಲೇ ರಚಿತವಾಗಿವೆ. ಎಂಟನೇ ಸರ್ಗವಂತೂ ಶ್ಲೇಷದ ವಿಶ್ವರೂಪದರ್ಶನ!
ಹಿಂದಿನ ಸಂಸ್ಕೃತಕವಿಗಳು ಇಡಿಯ ಕಾವ್ಯವನ್ನು ಶ್ಲೇಷದಲ್ಲಿ ರಚಿಸಿದ ಉದಾಹರಣೆಗಳು ಸಿಗುತ್ತವೆ. ಇದು ಸಂಸ್ಕೃತಕ್ಕೆ ತಾನೇ ಒಗ್ಗಿ ಬಂದ ಸೊಗಸು. ವೇದದ ಪ್ರತಿ ಮಾತಿಗೂ ಮೂರು ಅರ್ಥಗಳು, ಭಾರತಕ್ಕೆ ಕನಿಷ್ಠ ಹತ್ತು, ವಿಷ್ಣಸಹಸ್ರನಾಮದ ಪ್ರತಿ ನಾಮಕ್ಕೂ ನೂರು ಅರ್ಥಗಳನ್ನು ಹೇಳಬಹುದು ತಾನೇ! ಅದು ವಿಶೇಷ ಉಪಾಸನೆಗೂ ಆಗುವ ಸಾಧನೆ.
ಶ್ಲೇಷದ ಈ ಸೊಬಗನ್ನು ಕನ್ನಡದಲ್ಲಿ ಇಡಲು ಕಷ್ಟಸಾಧ್ಯ! ಅದಕಾಗಿ ಈ ತಯಾರಿ. ಶ್ಲೇಷದ ಲಕ್ಷಣ, ಉದಾಹರಣೆ ಹಾಗೂ ಒಂದಿಷ್ಟು ಪರಿಚಯ ಆದರೆ, ಮುಂದೆ ಕಾವ್ಯದ ಭಾವಸಂಗ್ರಹ ಲಲಿತವಾಗುತ್ತದೆ, ನನಗೂ ನಿಮಗೂ ಎಂದೇ ಈ ಶ್ಲೇಷಪಾಠ.
ಹಿಂದೆ ನಾವು ನೋಡಿದ ಅನಾಕುಲಮ್ (೧.೨)  ಕರ್ಣಾಂತಮಾನೀಯ (೧.೧೪) ಎಂಬ ಪದ್ಯಗಳೂ ಇದೇ ಅಲಂಕಾರದ ಉದಾಹರಣೆಗಳು.
ಮುಂದೆ ಸಾಗುವ,
ಇಲ್ಲಿ ಸಮಾನಂದಿತ-ರೂಪಸೀತಃ ಎಂದು ಕವಿ ಹೇಳಿದ.
ಲಂಕೆಯ ಅಶೋಕವನದಲ್ಲಿ ಕಾಲಸವೆಸಿದ್ದು ನಿಜವಾದ ಸೀತೆಯಲ್ಲ, ಅದು ‘ರೂಪಸೀತಾ’. ರೂಪದಿಂದ ಮಾತ್ರ ಸೀತೆ, ನೋಡಲು ಸೀತೆಯೆಂತೆ ಇದ್ದ ರೂಪ. ನಿಜವಾದ ಸೀತೆಯೆಲ್ಲಿ?
ದೇವ್ಯಾಃ ಸಮೀಪಮಥ ರಾವಣ ಆಸಸಾದ ಸಾsದೃಶ್ಯತಾಮಗಮದಪ್ಯವಿಷಹ್ಯಶಕ್ತಿಃ । ಸೃಷ್ಟಾsತ್ಮನಃ ಪ್ರತಿಕೃತಿಂ ಪ್ರಯಯೌ ಚ ಶೀಘ್ರಂ ಕೈಲಾಸಮರ್ಚಿತಪದಾ ನ್ಯವಸಚ್ಛಿವಾಭ್ಯಾಮ್’ ([1])
ರಾವಣ ಬಂದೊಡನೆ, ಅವನನ್ನು ದೃಶ್ಯಳಾಗಿಯೇ ನಿಗ್ರಹಿಸುವ ಶಕ್ತಿಯಿದ್ದರೂ, ತಾನು ಅದೃಶ್ಯಳಾಗಿ, ತನ್ನದೊಂದು ಆಡುಗೊಂಬೆಯನ್ನು ಮಾಡಿ, ಕೈಲಾಸಕ್ಕೆ ಹೋದಳು. ಅಲ್ಲಿ ಶಿವಶಿವೆಯರಿಂದ ನಿತ್ಯ ಪೂಜೆಗೊಂಡಳು.
ವಿಜಯದಾಸರು ದುರ್ಗಾಸುಳಾದಿಯಲ್ಲಿ ಹೇಳಿದರು, ಕೈಲಾಸಪುರದಲ್ಲಿ ಪೂಜೆಗೊಂಬುವ ದೇವಿ’, ಎಂದು.
ಲಂಕೆಗೆ ಆ ಮಂಕು ರಾವಣ ಹೊತ್ತು ಹೋದದ್ದು ಬರಿಯ ಸೀತೆಯಂತೆ ರೂಪವಿದ್ದ ಗೊಂಬೆಯನ್ನು.
ಹನುಮನು ಸೀತಾಕೃತಿಯನ್ನು ಕಂಡು ಸವಿನುಡಿಗಳಿಂದ ಸಂತೈಸಿದ: "ಕುಶಲೀ ತವ ಕಾಕುತ್ಸ್ಥಃ ಸರ್ವಶಸ್ತ್ರಭೃತಾಂ ವರಃ" ([2])   ಅಮ್ಮ! ನಿನ್ನ ರಾಮ ಕ್ಷೇಮವಾಗಿದ್ದಾನೆ.

'ರಾಘವಶ್ಚ ಮಹಾವೀರಃ ಕ್ಷಿಪ್ರಂ ತ್ವಾಮಭಿಪತ್ಸ್ಯತೇ । ಸಮಿತ್ರಬಂಧವಂ ಹತ್ವಾ ರಾವಣಂ ರಾಕ್ಷಸಾಧಿಪಮ್’ ([2])
ಮಹಾವೀರನಾದ ನಿನ್ನ ರಾಮನು ಬೇಗನೆ ಕೇಡಿಗಳ ದೊರೆಯಾದ ಈ ರಾವಣನನ್ನು ಬಂಧುಮಿತ್ರರ ಸಹಿತವಾಗಿ ಕೊಂದು ನಿನ್ನನ್ನು ಸೇರುವನು.
ವಿಷ್ಣು ಪಾದಕ್ಕೆ ಬಂದು ನಮಿಸಿದ. ಹೇಗೆ?
‘ಚೂಳಾಮಣಿಂ ಪವನಜಃ ಪದಯೋಃ ನಿಧಾಯ । ಸರ್ವಾಙ್ಗಕೈಃ ಪ್ರಣತಿಮಸ್ಯ ಚಕಾರ ಭಕ್ತ್ಯಾ’ ([2])
ರಾಮನಡಿಮೇಲೆ ಚೂಳಾಮಣಿಯನ್ನು ಇಟ್ಟು, ಭಕ್ತಿಯಿಂದ ಸರ್ವಾಂಗಗಳಿಂದ ನಮಿಸಿದ.

ಛಂದಸ್ಸು ಉಪೇಂದ್ರಮಾಲಾ ಎಂಬ ಉಪಜಾತಿ.



[1] ಮಹಾಭಾರತ ತಾತ್ಪರ್ಯ ನಿರ್ಣಯ (೫.೩೭),
[2] ವಾಲ್ಮೀಕಿ ರಾಮಾಯಣ

Madhwavijaya - ಶ್ರೀಮಧ್ವವಿಜಯಭಾವಸಂಗ್ರಹ-ಸರ್ಗ ೦೧_೧೪


ಕರ್ಣಾಂತಮಾನೀಯ ಗುಣ-ಗ್ರಹೀತ್ರಾ ರಾಮೇಣ ಮುಕ್ತೋ ರಣ-ಕೋವಿದೇನ ।
ಸ್ಫುರನ್ನಸೌ ವೈರಿ-ಭಯಂಕರೋsಭೂತ್ ಸತ್ಪಕ್ಷಪಾತೀ ಪ್ರದರೋ ಯಥಾಗ್ರ್ಯಃ  ॥೦೧.೧೪  

ಸಮರತಂತ್ರದಲ್ಲಿ ಜಾಣನಾದ, ರಾಮಚಂದ್ರ ಬಿಟ್ಟ ಬಾಣ!
ಹೆದೆಯನ್ನು ಕಿವಿವರೆಗೂ ಎಳೆದು, ಏನೋ ಗುಟ್ಟನುಸುರಿ ಬಿಟ್ಟ ಈ ಹನುಮನೆಂಬ ಪ್ರತಿಯಿಲ್ಲದ ಬಾಣ!
ರಾಮನೆಸೆತಕ್ಕೆ ಗಗನದಲ್ಲಿ ಚಿಮ್ಮಿ ಸಾಗಿದ ಈ ಬಾಣ, ಹಗೆಗಳ ಎದೆಯಲ್ಲಿ ದುಗುಡವನ್ನು ಹುಟ್ಟಿಸಿತು, ಸುಜನರ ಗಡಣಕ್ಕೆ ಹರುಷವ ತಂದಿತು.
ಇದೊಂದು ಅದ್ಭುತವಾದ ಪದ್ಯ.
ಗುಣ ಎಂಬ ಶಬ್ದಕ್ಕೆ ಎರಡು ಅರ್ಥ -  ೧.ನಿರ್ದುಷ್ಟವಾದುದು, ೨.ಬಿಲ್ಲಿಗೆ ಕಟ್ಟುವ ಮೌರ್ವೀ.
ರಾಮನೆಂಬ ರಣಕೋವಿದನ ಕೈಯಲ್ಲಿ ಒಂದು ಬಿಲ್ಲು. ಅದಕ್ಕೆ ಹನುಮನೆಂಬ ಬಾಣವನ್ನು ಹೂಡಿದ. ಮೌರ್ವೀಯನ್ನು (ಗುಣ) ಕಿವಿಯವರೆಗು ಎಳೆದು ಬಾಣವನ್ನು ಎಸೆವರು ವೀರರು. ಇಲ್ಲಿ ರಾಮನೂ ಹನುಮನ ಗುಣವನ್ನು ಹಿಡಿದು ಕಿವಿಯವರೆಗೂ ಸೆಳೆದು, ಅಲ್ಲಿ ಗುಟ್ಟಾಗಿ ಏನನ್ನೋ ಉಸುರಿ ಎಸೆದ.
ಯಾವ ಗುಣಗಳನ್ನು ಹಿಡಿದು ಸೆಳೆದ?
ರಾಮನೇ ಹನುಮನ ಗುಣಗಳನ್ನು ಸಾರಿದ್ದು ಹೀಗೆ -
"ನಾನೃಗ್ವೇದವಿನೀತಸ್ಯ ನಾಯಜುರ್ವೇದ ಧಾರಿಣಃ । ನಾಸಾಮವೇದವಿದುಷಃ ಶಕ್ಯಮೇವಂ ಪ್ರಭಾಷಿತುಮ್ ॥
ತ್ವಯ್ಯೇವ ಹನುಮನ್ನಸ್ತಿ ಬಲಂ ಬುದ್ಧಿಃ ಪರಾಕ್ರಮಃ । ದೇಶಕಾಲನುವೃತ್ತಿಶ್ಚ ನಯಶ್ಚ ನಯಪಂಡಿತ ॥
ಶೌರ್ಯಂ ದಾಕ್ಷ್ಯಂ ಬಲಂ ಧೈರ್ಯಂ ಪ್ರಾಜ್ಞತಾ ನಯಸಾಧನಮ್ । ವಿಕ್ರಮಶ್ಚ ಪ್ರಭಾವಶ್ಚ ಹನೂಮತಿ ಕೃತಾಲಯಾಃ"
"ಚತುರ್ವೇದಗಳ ತಳವನ್ನು ಅಳಿದವನಲ್ಲದಿರೇ ಹೀಗೆ ಮಾತನಾಡಲೂ ಆಗದು! (ಹನುಮನ ಮಾತಿನ ಜಾಣ್ಮೆಯನ್ನು ಕುರಿತು ರಾಮನು ಲಕ್ಷ್ಮಣನಿಗೆ ಹೇಳಿದ ಮಾತು)
ಹನುಮ! ತಾಕತ್ತು, ಬುದ್ಧಿ, ವೈರಿಯನ್ನು ಸೆದೆವ ಚಾತಿ, ದೇಶ ಕಾಲಗಳಿಗೆ ತಕ್ಕ ನಡತೆ, ವಿವೇಕ, ಶೌರ್ಯ, ದಿಟ್ಟತನ ಹಾಗೂ ಇನ್ನೊಬ್ಬರ ಮೇಲೆ ಪ್ರಭಾವ ಬೀರುವ ತೇಜಸ್ಸು, ನಿನ್ನಲ್ಲಿ ಮನೆಮಾಡಿವೆ ಈ ಎಲ್ಲಾ ನಲ್ಗುಣಗಳು".
ಈ ಗುಣಗಳನ್ನು ಹಿಡಿದು ಬಳಿಸೆಳೆದ.
ರಾಮ ಹೇಳಿದ ಗುಟ್ಟದು ಏನು? ಹನುಮನನ್ನೇ ಕೇಳಬೇಕು -
"ನ ಕಶ್ಚಿದೀಶಸ್ತ್ವದೃತೇsಸ್ತಿ ಸಾಧನೇ ಸಮಸ್ತಕಾರ್ಯಪ್ರವರಸ್ಯ ಮೇsಸ್ಯ । ಅತಸ್ತ್ವಮೇವ ಪ್ರತಿ ಯಾಹಿ ದಕ್ಷಿಣಾಂ ದಿಶಂ ಸಮಾದಾಯ ಮದಙ್ಗುಲೀಯಕಮ್"
"ನಿನ್ನ ಹೊರೆತಿನ್ನಾರೂ ಇಲ್ಲ ಸಮರ್ಥರು ನನ್ನ ಕಾರ್ಯವನ್ನು ಸಾಧಿಸುವ ಮಲ್ಲರು! ಹೋಗು ತೆಂಕಣದೆಡೆಗೆ ಇಗೋ ಈ ನನ್ನ ಉಂಗುರದೊಟ್ಟಿಗೆ!"
ಈ ಗುಟ್ಟನ್ನು ಉಸುರಿ ಎಸೆದ ಪ್ರತಿಯಿಲ್ಲದ( ಅಗ್ರ್ಯ)ಬಾಣವನ್ನು (ಪ್ರದರ).
ಪ್ರದರ ಎಂದರೆ ಬಾಣ. ಏಕೆ ಆ ಹೆಸರು? ಪ್ರ + ದರ, ಚೆನ್ನಾಗಿ ಸೀಳಿಬಿಡುವ ತಾಕತ್ತಿನದು.
ಅಗ್ರ್ಯ ಎಂದರೆ ಶ್ರೇಷ್ಠ. ಅಷ್ಟೇ ಅಲ್ಲ, ಎಲ್ಲಕ್ಕಿಂತ ಮುನ್ನುಗ್ಗಿ ಸಾಗುವ ವೇಗದ್ದು ಎಂದೂ ಅರ್ಥ. ಎಲ್ಲಾ ಕಪಿಗಳು ಸಮುದ್ರವನ್ನು ದಾಟುವ ಚಾತಿಯಿಲ್ಲದೆ ಕೈಚೆಲ್ಲಿ ಕೂತಾಗ, ನೂರು ಯೋಜನದ ಸಾಗರವನ್ನು ಲೀಲೆಯಲಿ ದಾಟಿದ ಅಗ್ರೇಸರಬಾಣ ಇದು!
ಸತ್ಪಕ್ಷಪಾತೀ - ಬಾಣ ಹೋಗಿ ಬಿತ್ತು ವೈರಿಯ ಪಕ್ಷದಲ್ಲಿ. ಸೀತಾಕೃತಿಗೆ, ವಿಭೀಷಣನಿಗೆ, ದಡದ ಆಚೆ ಇದ್ದ ಎಲ್ಲಾ ಕಪಿಗಳಿಗೆ ಪ್ರೀತಿಯನ್ನು ತಂದಿತ್ತು, ಹಗೆಗಳ ಬಗೆಗೆ ಬೆಂಕಿ ಹಾಕಿ ಮರಳಿತು.
ಛಂದಸ್ಸು ಶಾಲಾ ಎಂಬ ಉಪಜಾತಿಯ ಪ್ರಭೇದ.