ಮಧ್ವವಿಜಯವು
ಒಂದು ಮಹಾಕಾವ್ಯವಷ್ಟೇ ಅಲ್ಲ ಅದೊಂದು ಉದ್ಗ್ರಂಥ.
ಕವಿ ವೇದವೇದಾಂತಾದಿ ಶಾಸ್ತ್ರಗಳಲ್ಲಿ ನುರಿತವನಲ್ಲದಿದ್ದರೆ ಇಂಥಾ ಕೃತಿಯನ್ನು ರಚಿಸಲಾರ.
ಇದರ ಅಧ್ಯಯನವು ಒಂದು ಹಿರಿಯ ಶಾಸ್ತ್ರಪ್ರಪಂಚವನ್ನು
ತೆರೆದಿಡುತ್ತದೆ. ಹದಿನೈದನೇ ಸರ್ಗವು ತತ್ವವಾದದ ಮಂಡನೆಗಾಗಿಯೇ ಮೀಸಲಿಟ್ಟಂತಿದೆ. ಅನೇಕ ತತ್ವವಾದದ ಪ್ರಮೇಯಗಳನ್ನು
ಅಲ್ಲದೆ, ಮೀಮಾಂಸ -ವ್ಯಾಕರಣ -ಛಂದಸ್ಸು ಮೊದಲಾದ ಶಾಸ್ತ್ರಗಳ ವಿಶಾಲವಾದ ವಿನ್ಯಾಸವನ್ನು ಅಧ್ಯೇತೃಗಳು ಸಾಕ್ಷಾತ್ಕರಿಸಿಕೊಳ್ಳಬಹುದು.
ಇದು
ಮಧ್ವವಿಜಯದ ಮೂರನೇ ಮುಖ. ಈ ಕಾವ್ಯವನ್ನು
ತಾನು ಯಾವುದೇ ಆಸೆಯಿಂದಾಲೀ, ಫಲಕ್ಕಾಗಲೀ ರಚಿಸಿದ್ದಲ್ಲವೆಂದು ನಾರಾಯಣರು ಹೇಳಿದ್ದು ಹಿಂದೆಯೇ ನೋಡಿದೆವು. ಮತ್ತೆ ಯಾಕಾಗಿ ಈ ರಚನೆ? ಅವರನ್ನೇ
ಕೇಳಿ -
ಸ ಮಧ್ವವಿಜಯಂ ವ್ಯಧಾತ್ ಗುರುಗಿರಾ ಸದಾನಂದದಃ ।
ಪ್ರಸೀದತು
ತತಃ ಸದಾ ದಶಮತಿಃ ಸ
ನಾರಾಯಣಃ ॥
ಗುರುಗಳ
ಮಾತನ್ನು ಪಾಲಿಸಿ, ಈ ನಾರಾಯಣನೆಂಬುವನು ಮಧ್ವವಿಜಯವನ್ನು
ಮಾಡಿದನು. ಇದರಿಂದ ಸಜ್ಜೀವರಿಗೆ ಸ್ವರೂಪಾನಂದವನ್ನು ಕೊಡುವ, ಅಂತರ್ಯಾಮಿಯಾದ ನಾರಾಯಣನ ಜೊತೆಯಿರುವ ದಶಪ್ರಮತಿಯು ಎಂದೆಂದೂ ಪ್ರೀತನಾಗಲಿ. ಪ್ರಾಣ ನಾರಾಯಣರ ಪ್ರೀತಿಯೇ ಇದರ ಫಲ. ಅಂತರ್ಯಾಮಿಯು
ಒಲಿಯಬೇಕಾದರೆ,ಅವನ ಅಂತರ್ಯಾಮಿತ್ವದ ಅರಿವು
ಉಂಟಾಗಬೇಕು. ಮಧ್ವನೆಂಬೊಬ್ಬ ದಾರ್ಶನಿಕನು ಎಲ್ಲೋ ಉಡುಪಿಯ ಹತ್ತಿರದ ಪಾಜಕದಲ್ಲಿ ಹುಟ್ಟಿದ, ಗ್ರಂಥಗಳನ್ನು ಹೆಣೆದ, ಬದರಿಯಲ್ಲಿ ಕಾಣದಾದ ಎಂಬ ಬಾಹ್ಯ ಘಟನೆಗಳ
ಮೊತ್ತವಿದಲ್ಲ. ನಮ್ಮೊಳಗಿನ ಪ್ರಾಣಾತ್ಮನೇ ನಮ್ಮನ್ನು ತತ್ವಮಾರ್ಗದಲ್ಲಿ ನಡೆಸಲು ನಮ್ಮ ಅಂತರಂಗದಲ್ಲಿ ತೋರುವ
ಲೀಲೆ ಮಧ್ವವಿಜಯ. ಇದು ಒಳಗಿನ ಮಧ್ವನ
ಕಥೆ. ನಮ್ಮ ಬಿಂಬ ಪ್ರಜ್ಞೆಯನ್ನು
ಬಡಿದೆಬ್ಬಿಸುವ ಕಥೆ. ಆದ್ದರಿಂದಲೇ ನಾರಾಯಣ
ಪಂಡಿತರು ಹೇಳುತ್ತಾರೆ -
'ಗಮನಾಸನಸಂಕಥಾದಿಲೀಲಾಃ
ಶೃತಿಮಾತ್ರೇಣ ಭವಾಪವರ್ಗದಾತ್ರೀಃ' ಎಂದು.
ಮಧ್ವರ ನಡೆನುಡಿಗಳನ್ನು ನೆನೆದವ -ವೈಕುಂಠಕ್ಕೆ ಓಡಿದವ. ಇದೇ ಮಧ್ವವಿಜಯದ ಮುಖ್ಯಾರ್ಥ.
ಮಧ್ವನ
ಒಳಗಿರುವ ಮಧ್ವನ ಅಚಿಂತ್ಯವಾದ ಮಹಾಕರ್ತೃತ್ವದ ಅನುಸಂಧಾನದ ಆಧ್ಯಾತ್ಮಿಕಾರ್ಥ.
ಇವೇ
ಭಾವೀ ನಾಲ್ಮೊಗನವಿಜಯದ ನಾಲ್ಕು ಮುಖಗಳು.