ಐದನೇ ಮಂತ್ರ:
ತ್ವಂ ವಿಶ್ವಾ ದಧಿಷೇ ಕೇವಲಾನಿ ಯಾನ್ಯಾವಿರ್ಯಾ ಚ ಗುಹಾ ವಸೂನಿ ।
ಕಾಮಮಿನ್ಮೇ ಮಘವನ್ ಮಾ ವಿ ತಾರಿಸ್ತ್ವಮಾಜ್ಞಾತಾ ತ್ವಮಿಂದ್ರಾಸಿ ದಾತಾ
॥
ಹೇ ಇಂದ್ರ (ಸರ್ವಾಂತರ್ಯಾಮಿ), ನೀನು (ತ್ವಂ) ಯಾವುವು ಕೇವಲ (ಯಾನಿ ಕೇವಲಾನಿ) ನಿನ್ನಿಂದ ಮಾತ್ರ
ಕೊಡಲು ಶಕ್ಯವೋ (ವಿಶ್ವಾನಿ) ಅವುಗಳನ್ನು ನಿನ್ನ ಭಕ್ತರ ಪಾಲಿಗೆ ಪ್ರಕಟಗೊಳಿಸುವೆ (ಯಾನ್ಯಾವಿಃ).
ಐಹಿಕವಾದ ಎಲ್ಲಾ ಭಾಗ್ಯಗಳನ್ನು ದಯಪಾಲಿಸುವೆ.
ಬೇಡಿದ ಭಕ್ತರಿಗೆ, (ಯಾನಿ) ಹೃದಯಗುಹೆಯಲ್ಲಿ (ಗುಹಾ) ಅವಿತಿರುವ ಬಿಂಬನ ಜ್ಞಾನವೆಂಬ ನಿಜ
ಸಂಪತ್ತನ್ನು (ವಸೂನಿ) ಕೊಡುವೆ (ದಧಿಷೇ).
ಹೇ ಸಂಪತ್ತಿನ ಒಡೆಯ! (ಮಘವನ್), ನನ್ನ ಐಹಿಕ-ಆಮುಷ್ಮಿಕವಾದ ಎಲ್ಲಾ ಕಾಮವು (ಕಾಮಮಿನ್ಮೇ) ಯಾವುವೂ
ಎಂದಿಗೂ ನಾಶಮಾಡದೆ ಕಾಪಿಡು (ಮಾ ವಿತಾರಿಃ).
ಭವದ ಹಾದಿಯಲ್ಲಿ ಏನೇನೋ ಆಸೆಗಳು, ಏನೇನೋ ಮೋಸಗಳು! ನನ್ನಪ್ಪ! ನೀನಲ್ಲವೇ ಅವೆಲ್ಲದುದರ ನಿಜವಾದ
ಪ್ರೇರಕಶಕ್ತಿ! ನೀನಲ್ಲವೇ ನನ್ನಲ್ಲಿ ಇದ್ದು ಅವುಗಳನ್ನು ಬಯಸಿದ್ದು! (ತ್ವಮಾಜ್ಞಾತಾ) ನೀನೇ
ಅಲ್ಲವೇ ಅವುಗಳನ್ನು ಕೊಡುವ ಕಾಲಕ್ಕೆ ಕೊಟ್ಟು ನನ್ನನ್ನು ಉದ್ಧರಿಸುವುದು! (ದಾತಾ)!
ಆರನೇ ಮಂತ್ರ:
ಯೋ ಅದಧಾಜ್ಜ್ಯೋತಿಷಿ ಜ್ಯೋತಿರಂತರ್ಯೋ ಅಸೃಜನ್ಮಧುನಾ ಸಂ ಮಧೂನಿ ।
ಅಧ ಪ್ರಿಯಂ ಶೂಷಮಿಂದ್ರಾಯ ಮನ್ಮ ಬ್ರಹ್ಮಕೃತೋ ಬೃಹದುಕ್ಥಾದವಾಚಿ ॥
ಬಲಜ್ಞಾನಸ್ವರೂಪನು (ಯೋ) ನೀನು
ನನ್ನೊಳಗಷ್ಟೇ ತುಂಬಿಲ್ಲ ಸ್ವಾಮಿ! ಜ್ಯೋತಿಗಳ ರಾಜನಾದ ಸೂರ್ಯನೊಳಗಿದ್ದು ಅವನನ್ನು ಬೆಳಗಿಸುವೆ
(ಅದಧಾಜ್ಜ್ಯೋತಿಷಿ ಜ್ಯೋತಿರಂತರ್ಯೋ). ದೀಪದಂತೆ ನಮಗೆ ಸಾಧನೆಯ ಹಾದಿದೋರುವ ವೇದಗಳ ಅಂತರಾರ್ಥದ ಆವಿಷ್ಕಾರದಿಂದ ಅವುಗಳಿಗೆ
ಹೊಸಬೆಳಕನ್ನು ಇತ್ತೆ. ಮಧ್ವನಾಗಿ ಬಂದು, ಹೆಸರಿಗೆ ತಕ್ಕಂತೆ, ಮಧುರವಾದ ನುಡಿಗಳಿಂದ ವೇದವ್ಯಾಸನಿತ್ತ ಪ್ರಮೇಯಗಳೆಂಬ ಜೇನನ್ನು
ಚಿಮ್ಮಿಸಿದೆ (ಅಸೃಜನ್ಮಧುನಾ ಸಂ ಮಧೂನಿ).
ಹೀಗೆ ಬಹುವಿಧದಿಂದ, ವೇದದೃಷ್ಟಾರನಾದ (ಬ್ರಹ್ಮಕೃತೋ) ಬೃಹದುಕ್ಥನೆಂಬ ನನ್ನಿಂದ
ಇಂದ್ರನಾಮಕನಾದ ಪ್ರಾಣನಿಗೆ (ಇಂದ್ರಾಯ) ಅತ್ಯಂತ ಪ್ರಿಯವಾದ (ಪ್ರಿಯಂ) ಅಜ್ಞಾನವನ್ನು
ಕರಗಿಸಿಬಿಡುವ (ಶೂಷಮ್) ಮನನೀಯವಾದ (ಮನ್ಮ) ಈ ಸ್ತುತಿಯು ಆಯಿತು (ಅವಾಚಿ).
ವೇದಗಳ ಅಂತರಾರ್ಥವನ್ನು ಬಲ್ಲ
ಸಾತ್ವಿಕಜೀವರೆಲ್ಲರೂ ಬ್ರಹ್ಮಕೃತ್ಗಳೇ! ಬೃಹತ್ತಾದ ತತ್ವಗಳು ಮುಖ್ಯಪ್ರಾಣ ಹಾಗೂ
ಅವನಂತರ್ಯಾಮಿಯು. ಅವರನ್ನು ತುತಿಸುವ ಮನುಜರೆಲ್ಲ ಬೃಹದುಕ್ಥರೇ!
No comments:
Post a Comment