ಹದಿಮೂರು ಮಂತ್ರಗಳಲ್ಲಿ ಹನ್ನೆರಡನೇ ಮಂತ್ರ:
ರಥಾಯ ನಾವಮುತ ನೋ ಗೃಹಾಯ ನಿತ್ಯಾರಿತ್ರಾಂ ಪದ್ವತೀಂ
ರಾಸ್ಯಗ್ನೇ ।
ಆಸ್ಮಾಕಂ ವೀರಾನ್ ಉತ ನೋ ಮಘೋನೋ ಜನಾಂಶ್ಚ ಯಾ ಪಾರಯಾಚ್ಛರ್ಮ
ಯಾ ಚ ॥
ಹೇ ಸರ್ವಜ್ಞ, ಅಜ್ಞಾನನಾಶಕ (ಅಗ್ನೇ)! ಕೊಡು ನಮಗೆ
ಸಂಸಾರಸಾಗರವನ್ನು ಹಾಯಿಸುವ ದೋಣಿಯನ್ನು (ನಾವಂ ರಾಸಿ), ಆನಂದದ ಚಿಲುಮೆಯಾದ(ರಥಾಯ) ನನ್ನ
ಬಿಂಬನ ಮನೆಗೆ (ಗೃಹಾಯ) ಕೊಂಡೊಯ್ಯುವ ದೋಣಿಯನ್ನು! ಭಕ್ತಿಯೆಂಬ ಹುಟ್ಟುಗೊಲಿಂದ ಭಗವಂತನೆಡೆಗೆ
ಸಾಗುವ ದೋಣಿಯನ್ನು (ಅರಿತ್ರಾಂ ಪದ್ವತೀಂ)!
ನನ್ನಷ್ಟೇ ಅಲ್ಲ, ಮತ್ತೆ ನನ್ನಂಥಾ ಎಷ್ಟೋ
ವೀರರು(ಆಸ್ಮಾಕಂ ವೀರಾನ್ ಉತ) ಈ ದೋಣಿಯಲ್ಲಿ ಸಾಗಲು ಸಜ್ಜಾಗಿದ್ದಾರೆ, ಅವರಿಗೆ ಗಟ್ಟಿಯಾದ ದೋಣಿಯನ್ನೀಯು.
ನನ್ನ ಆತ್ಮಬಂಧುಗಳಾದ ಎಲ್ಲಾ ಸಾತ್ವಿಕರನ್ನೂ, ಜ್ಞಾನಸಂಪತ್ತಿನಿಂದ ಕೂಡಿದವರನ್ನೂ
(ಮಘೋನೋ ಜನಾಂಶ್ಚ) ದಡಮುಟ್ಟಿಸು! ಸ್ವರೂಪಾನಂದವನ್ನು ನಿತ್ಯವೂ ಕೊಟ್ಟು ಸಲಹು!
ಇದೇ ನಮ್ಮ ಅಂತರಂಗದ ಪ್ರಾರ್ಥನೆ.
ಹದಿಮೂರು ಮಂತ್ರಗಳಲ್ಲಿ ಹದಿಮೂರನೇ ಮಂತ್ರ:
ಅಭೀ ನೋ ಅಗ್ನ ಉಕ್ಥಮಿಜ್ಜುಗುರ್ಯಾ ದ್ಯಾವಾಕ್ಷಾಮಾ
ಸಿಂಧವಶ್ಚ ಸ್ವಗೂರ್ತಾಃ ।
ಗವ್ಯಂ ಯವ್ಯಂ ಯಂತೋ ದೀರ್ಘಾಹೇಷಮ್
ವರಮರುಣ್ಯೋ ವರಂತ ॥
ಹೇ ಸರ್ವತತ್ವಾಭಿಮಾನಿನೇತಾ (ಅಗ್ನೇ)! ನಾವು ಮಾಡಿದ ಈ ಸ್ತುತಿಯನ್ನು
ಸ್ವೀಕರಿಸು (ಉಕ್ಥಮಿಜ್ಜುಗುರ್ಯಾ)
ನಿನ್ನ ಅನುಗ್ರಹದಿಂದ ಭೂಮಿ ಅಂತರಿಕ್ಷಗಳು (ದ್ಯಾವಾಕ್ಷಾಮಾ), ಮೇಲೇರಿಸುವ, ಕರುಣೆಯ ಕಡಲಾದ ತತ್ವನಿಯಾಮಕಸುರರು
(ಸಿಂಧವಶ್ಚ ಸ್ವಗೂರ್ತಾ:), ವೇದಪ್ರತಿಪಾದ್ಯನಾದ (ಗವ್ಯಂ),
ಧ್ಯಾನದ ಸ್ಥಿತಿಯಲ್ಲಿ ಆತ್ಮದಲ್ಲಿ
ಗೋಚರಿಸುವ (ಯವ್ಯಂ) ಪರಬ್ರಹ್ಮನನ್ನು ಸೇರಿಸುವವರಾಗಲಿ (ಯಂತೋ). ದಿನದಿನವೂ (ದೀರ್ಘಾಹ) ನಮಗೆ
ಇಷ್ಟವಾದ, ಆತ್ಮಕ್ಕೆ ಪುಷ್ಟಿಯನ್ನೀವ ಜ್ಞಾನಾನ್ನದ (ಇಷಮ್) ವರವನ್ನು ಕರೆಯಲಿ
(ವರಂತ)!
No comments:
Post a Comment