ರಾಮನ ಸಾಮ್ರಾಜ್ಯಾಭಿಷೇಕವಾಯಿತು.
ಸೂರ್ಯವಂಶದ ಕೀರ್ತಿಕೇತು ಮುಗಿಲಲ್ಲಿ ರಾರಾಜಿಸಿತು. ಪಟ್ಟಾಭಿಷೇಕದ ಕೊನೆಯಲ್ಲಿ ನಡೆದೊಂದು
ರೋಚಕಕಥೆಯನ್ನು ವಾಲ್ಮೀಕಿ ಉತ್ತರರಾಮಾಯಣದಲ್ಲಿ ಬಿತ್ತರಿಸಿದ್ದು, ಕವಿಯ ಮಾತಿನ ಮೋಡಿಯಲ್ಲಿ,
ರಾಜ್ಯಾಭಿಷೇಕೇsವಸಿತೇsತ್ರ ಸೀತಾ ಪ್ರೇಷ್ಠಾಯ ನಸ್ತಾಂ
ಭಜತಾಂ ದಿಶೇತಿ ।
ರಾಮಸ್ಯ ವಾಣ್ಯಾ ಮಣಿ-ಮಞ್ಜು-ಮಾಲಾ-ವ್ಯಾಜೇನ
ದೀರ್ಘಾಂ ಕರುಣಾಂ ಬಬನ್ಧ ॥೦೧.೨೨॥
ರಾಜ್ಯಾಭಿಷೇಕ ಕೊನೆಗೊಳ್ಳಲಾಗ, ಹನುಮನಿಗಲ್ಲವೇ ತಾಯಿ ಸೀತೆ
ಮಣಿಮಯರಮಣೀಯಹಾರವನ್ನು ನೀಡಿದ್ದು, ಹಾರದ ನೆವದಲ್ಲಿ ಸಾಟಿಯಿರದ
ಕರುಣೆಯನೆ ಇತ್ತದ್ದು! "ನಮ್ಮ ಸೇವಕರಲ್ಲೇ ಬಹಳ ನೆಚ್ಚಾದವರಿಗೆ ಕೊಡು", ಎಂಬ ರಾಮನ ಸೊಲ್ಲಿನಿಂದ.
ಉತ್ತರರಾಮಾಯಣದಲ್ಲಿ ಬಂದ ಕಥೆಯನ್ನು
ಆದಿಕವಿವಾಲ್ಮೀಕಿಯ ಮಾತಿನಿಂದ ಸವಿಯುವ -
ಮಣಿಪ್ರವರಜುಷ್ಟಂ
ಮುಕ್ತಾಹಾರಮನುತ್ತಮಮ್ । ಸೀತಾಯೈ ಪ್ರದದೌ ರಾಮಶ್ಚಂದ್ರರಶ್ಮಿಸಮಪ್ರಭಮ್ ॥
ಸೀತೆಗಿತ್ತ ರಾಮ, ಅಪೂರ್ವಮುತ್ತುಗಳ ರಾಶಿಯನ್ನೇ ತಂದು
ಪೋಣಿಸಿ ಮಾಡಿದ, ಚಂದ್ರಿಕೆಯಂತೆ ಬೆಳಗುವ ಮುಕ್ತಾಹಾರವನ್ನು.
ಅವಮುಚ್ಯಾsತ್ಮನಃ ಕಂಠಾತ್ ಹಾರಂ ಜನಕನಂದಿನೀ । ಆವೈಕ್ಷತ ಹರೀನ್ ಸರ್ವಾನ್ ಭರ್ತಾರಂ ಚ ಮುಹುರ್ಮುಹುಃ ॥
ಕೊರಳಿಂದ ತೆಗೆದಿತ್ತ ಈ ಹಾರವನ್ನು
ಕೈಯಲ್ಲಿ ಹಿಡಿದು, ಕಪಿಗಳನ್ನು ಮತ್ತು ತನ್ನ ಪತಿಯನ್ನು ಹೀಗೆ ಮತ್ತೆ ಮತ್ತೆ
ನೋಡುತ್ತಲಿದ್ದಳು, ಜನಕಾತ್ಮಜೇ.
ತಾಮಿಙ್ಗಿತಜ್ಞಃ ಸಂಪ್ರೇಕ್ಷ್ಯ
ಬಭಾಷೇ ಜನಕಾತ್ಮಜಾಮ್ ।ಪ್ರದೇಹಿ ಸುಭಗೇ ಹಾರಂ ಯಸ್ಯ ತುಷ್ಟಾಸಿ ಭಾಮಿನಿ ॥
ಅವಳ ಮನದಿಂಗಿತವನರಿತ ರಾಮ ಅಂದ, "ನಿನಗಿಷ್ಟದರಿಗೆ ಕೊಡು", ಎಂದು.
ದದೌ ಸಾ ವಾಯುಪುತ್ರಾಯ ತಂ
ಹಾರಮಸಿತೇಕ್ಷಣಾ ॥
ಕೊಟ್ಟಳು ಆ ಬೆಲೆಕಟ್ಟಲಾಗದ
ಹಾರವನ್ನು, ಕೊಳಕಿಲ್ಲದ ನೋಟದ ಸೀತೆ, ನಮ್ಮ ವಾಯುಪುತ್ರನಿಗೆ.
ಛಂದಸ್ಸು ಇಂದ್ರವಜ್ರಾ.