ಮೂರವತಾರದ ಮಧ್ವನಲ್ಲಿ ಮಾಡಬೇಕಾದ
ನಿಜವಾದ ಪ್ರಾರ್ಥನೆಯನ್ನು ಮಾಡಿ, ಮುಂದೆ, ಇಂಥಾ ಮಧ್ವರ ಸೇವೆಗೆ ತನ್ನನ್ನು
ಅಣಿಮಾಡಿದ, ಮಧ್ವಾಂತರ್ಯಾಮಿಯ ಜ್ಞಾನವಿತ್ತ,
ಹುಟ್ಟಿಸಿದ ತಂದೆ, ಬೆಳೆಸಿದ ಗುರುವಾದ
ತ್ರಿವಿಕ್ರಮಪಂಡಿತರನ್ನು ತುತಿಸುತ್ತಾರೆ.
ತಮೋನುದಾನಂದಮವಾಪ ಲೋಕಃ
ತತ್ವ-ಪ್ರದೀಪಾಕೃತಿ-ಗೋ-ಗಣೇನ ।
ಯದಾಸ್ಯ-ಶೀತಾಂಶು-ಭುವಾ ಗುರೂನ್ಸ್ತಾನ್ ತ್ರಿವಿಕ್ರಮಾರ್ಯಾನ್
ಪ್ರಣಮಾಮಿ ವರ್ಯಾನ್ ॥೧.೦೪ ॥
ಅದೊಂದು ಚಂದ್ರ ಬೆಳಗಿತ್ತು.
ಕುಂದಿರದ ಜ್ಞಾನಚಂದಿರ ಬೆಳಗಿತ್ತು. ಲೋಗರು ಅಜ್ಞಾನ, ಸಂಶಯಗಳನ್ನು ಹುಟ್ಟಿಸುವ ಕತ್ತಲಲ್ಲಿ
ಮರುಗುವುದನ್ನು ಕಂಡು, ಕರುಣೆಯಿಂದ ತನ್ನ ತತ್ವದ ಬೆಳದಿಂಗಳನ್ನು ಸೂಸಿತು. ಜನರು ಹುಟ್ಟಿಬಂದ
ಈ ಜ್ಞಾನದ ಬೆಳಕಲ್ಲಿ ವಸ್ತುಗಳನ್ನು ಕಾಣುವವರಾದರು, ಆನಂದಿಸಿದರು...
ಏನೀ ಒಗಟು? ಯಾರು ಈ ಜ್ಞಾನಚಂದ್ರ? ಯಾವ ಬೆಳದಿಂಗಳು? ಯಾವ ಕತ್ತಲು?
ಇವರೇ ಆನಂದತೀರ್ಥರ ಮಹಾನುಗ್ರಹಕ್ಕೆ
ಪಾತ್ರರಾದ, ಹರಿಯಾಜ್ಞೆಯಿಂದ ರಚಿಸಿದ ಸತ್ಸೂತ್ರಭಾಷ್ಯವನ್ನು ವಿವರಿಸಲು
ಪೂರ್ಣಪ್ರಜ್ಞರಿಂದಲೇ ಆಜ್ಞಪ್ತರಾದ, ಕವಿಕುಲತಿಲಕರಾದ ತ್ರಿವಿಕ್ರಮರೆಂಬ
ಹಿರಿಯ ಜ್ಞಾನಚಂದ್ರ.
ಇವರ ಮುಖದಿಂದ ಹೊಮ್ಮಿದ ಆ
ಬೆಳದಿಂಗಳೇ ತತ್ವಪ್ರದೀಪವೆಂಬ ಬ್ರಹ್ಮಸೂತ್ರ-ಭಾಷ್ಯದ ವ್ಯಾಖ್ಯಾನ(ಯದಾಸ್ಯ-ಶೀತಾಂಶು-ಭುವಾ)
ಸೂತ್ರಾರ್ಥವಿಷಯಕವಾದ ಸಜ್ಜನರ ಎಲ್ಲ ಅಜ್ಞಾನ, ಸಂಶಯಗಳಿಗೆ ಕಾರಣವಾದ ತಮೋಗುಣವನ್ನು
ದೂರೋಡಿಸುವ (ತಮೋನುದಾ) ಸ್ವಕ್ಷರಗಳ ಸಮೂಹ (ಗೋಗಣ). ನಿಶ್ಚಯಜ್ಞಾನವನ್ನು ಹೊಂದಿದ ಸಾತ್ವಿಕಲೋಕವು
ಸ್ವರೂಪಾನಂದವನ್ನೇ ಅನುಭವಿಸಿತು(ಆನಂದಮವಾಪ ಲೋಕ:)
ಇಂಥಾ ಜ್ಞಾನದ ಬೆಳಕನಿತ್ತ
ಹಿರಿಯರಾದ(ವರ್ಯಾನ್), ಗುರುಗಳಾದ(ಗುರೂನ್), ತ್ರಿವಿಕ್ರಮಾರ್ಯರಿಗೆ
ಸಾಷ್ಟಾಂಗವೆರಗುವೆ( ಪ್ರಣಮಾಮಿ)
ಚಂದ್ರನಿಗೆ ಹೋಲಿಸಿದ ಕಾರಣ, ಅದರ ತಂಪು, ಆಹ್ಲಾದ, ಸೌಮ್ಯಭಾವ, ಮುಂತಾದ ಅನೇಕಗುಣಗಳು
ತ್ರಿವಿಕ್ರಮರಲ್ಲು ಕಾಣುವುವೆಂಬ ಭಾವವು ಧ್ವನಿಸುತ್ತದೆ.
ಈ ಪದ್ಯವು ‘ಋದ್ಧಿ’ ಎಂಬ
ಮತ್ತೊಂದು ಉಪಜಾತಿಯ ಪ್ರಭೇದ. ತತ್ವಪ್ರದೀಪದ ಅಧ್ಯಯನದಿಂದ ಆಗುವ ಜ್ಞಾನಾಭಿವೃದ್ಧಿಯನ್ನು
ನಡೆಯಲ್ಲಿ ತೋರುವ ಕೌಶಲ.
No comments:
Post a Comment