‘ವಾಸುದೇವಾಯ
ವೇದವ್ಯಾಸಾಯ ಚ’, ಎಂದು ನಾರಾಯಣರೇ ತಮ್ಮ ಭಾವಪ್ರಕಾಶಿಕೆಯಲ್ಲಿ ಈ ಪದ್ಯಕ್ಕೆ
ಎರಡರ್ಥಗಳನ್ನು ತೋರಿದ್ದಾರೆ. ಒಂದು, ಮಧ್ವರು ತಮ್ಮ ಅವತಾರದ
ಪೂರ್ಣಾವಿಷ್ಕಾರಕ್ಕೆ ಉಪಾಸಿಸಿದ ವೇದಮೂರ್ತಿ ವ್ಯಾಸರೂಪನನ್ನು. ಎರಡು, ಕಲಿಯುಗದ ಸಕಲ ಸಾತ್ವಿಕರ
ಉಪಾಸನೆಗೆಂದೆ ಕಡಲಿಂದ ಹೊತ್ತು ತಂದು ತಮ್ಮ ಕೈಯಿಂದ ಪೂಜಿಸಿದ ಕೃಷ್ಣನನ್ನು.
ಒಂದು, ರಜತಗಿರಿಯಲ್ಲಿ ಕಂಡು ಸೇವಿಸಿದ
ವ್ಯಾಸನ ಪರವಾದ ಅರ್ಥ. ಇನ್ನೊಂದು, ರಜತಪೀಠಪುರದಲ್ಲಿ ಲೋಕಕಲ್ಯಾಣಕ್ಕಾಗಿ
ಸ್ಥಾಪಿಸಿದ ಕೃಷ್ಣನ ಪರವಾದ ಅರ್ಥ.
ನಾರಾಯಣಕವಿಯ ಆಧ್ಯಾತ್ಮಿಕ ಹೃದಯಕ್ಕೆ
ಈ ಶ್ಲೋಕವೇ ಹಿಡಿದ ಕನ್ನಡಿ. ಯತ್ಪಾಲಿತಮ್,, ಯಾರ ರಕ್ಷಣೆಯಲ್ಲಿ,, ನಿತ್ಯವೂ, ಅನಾಕುಲಂ,, ಒಳಗಿನ ಹಾಗೂ ಹೊರಗಿನ ಶತ್ರುಗಳ
ಭಯವಿಲ್ಲದ,, ಅನಾವಿಲಾತ್ಮ,, ಕೊಳಕಿಲ್ಲದ, ಪಾವನವಾದ ಮನಸ್ಸಿನ ,, ಗೋಕುಲಂ,, ಗೋವು ಹಾಗೂ ಗೋಪಾಲಕರ ಕುಲವು,, ಉಲ್ಲಲಾಸ,, ಚೆನ್ನಾಗಿ ಶೋಭಿಸಿತೋ, ಅಂಥಾ, ಕೃಷ್ಣೆಯ; ರುಗ್ಮಿಣಿಯ ರಮಣನಾದ, ಲೋಕರ ಪ್ರಿಯನಾದ, ನೀರದದಂತೆ ನೀಲವಾದ ಮೈಬಣ್ಣದ
ವಾಸುದೇವ -ಕೃಷ್ಣನಿಗೆ ನಮಸ್ಕಾರ.
ಜ್ಞಾನ ಹಾಗೂ ಬಲರೂಪವಾದ
ವ್ಯಾಸಕೃಷ್ಣನಿಗೆ ನಮಸ್ಕರಿಸಿ, ತಮ್ಮ ಗುರುವಿನ ಮಹಿಮೆಯೂ ಹೀಗೆ ಬಲಕಾರ್ಯ ಜ್ಞಾನಕಾರ್ಯ ಎರಡರಲ್ಲೂ
ಪೂರ್ಣವಾದುದೆಂದು ಧೇನಿಸಿ, ಮುಂದೆ ಮಧ್ವರ ಮಹಿಮೆಯನ್ನು ಕೊಂಡಾಡುತ್ತಾರೆ.
ಈ ಪದ್ಯದ ಛಂದಸ್ಸು ‘ಕೀರ್ತಿ’ಯಂಬ
ಉಪಜಾತಿಯ ಒಂದು ಪ್ರಭೇದ. ಇಲ್ಲಿ ‘ಶ್ಲೇಷ’ವೆಂಬ ಅರ್ಥಾಲಂಕಾರವಿದೆ. ಒಂದೇ ಶಬ್ದದಿಂದ ಬಹಳ
ಅರ್ಥಗಳನ್ನು ಹೊಮ್ಮಿಸುವ ಅಲಂಕಾರ. ಒಂದೇ ಪದ್ಯದಿಂದ ವ್ಯಾಸ ಹಾಗೂ ಕೃಷ್ಣನ ಕೀರ್ತಿಯನ್ನು ಸಾರುವ
ಶ್ಲೇಷ. ಎರಡಲ್ಲ ಅದು ಒಂದೇ ಎಂಬ ಐಕ್ಯವನ್ನು ತೋರುವ ವಿಶೇಷ.
No comments:
Post a Comment