ಅಭೂತಪೂರ್ವವಾದ
ಈ ಮಹಾಕಾವ್ಯವನ್ನು ಪರಿಶೀಲಿಸಿದವರಿಗೆ ತನ್ನ ತಾನೇ ಅರಿವಾಗುವ
ನಾಲ್ಕು ಸಂಗತಿಗಳು -ಇಲ್ಲಿನ ಅಪ್ರತಿಮ ಇತಿಹಾಸನಿಷ್ಠೆ, ಹೃದಯಂಗಮವಾದ ಕಾವ್ಯಸೌಂದರ್ಯ, ತಳಸ್ಪರ್ಶಿಯಾದ ಶಾಸ್ತ್ರವೈದುಷ್ಯ ಹಾಗೂ ಗಹನವಾದ ಅಧ್ಯಾತ್ಮ.
ಈ ಕಾವ್ಯದ ಪ್ರಭಂಧೃವಿನಲ್ಲಿ ಹಾಸುಹೊಕ್ಕಾದ ಗುಣ ಚತುಷ್ಟಯಗಳು ಪ್ರಬಂಧದಲ್ಲಿ
ಹೆಜ್ಜೆ ಹೆಜ್ಜೆಗೂ ಪ್ರತಿಫಲಿಸಿವೆ. ಶ್ರೀಮಧ್ವರನ್ನು ಪರಿಚಯಿಸುವ ಯಶೋಗಾಥೆಯ ನಾಲ್ಕು ಮುಖಗಳು ಇವು. ಭಾವಿ ಚತುರ್ಮುಖನ
ವಿಜಯಚರಿತೆಯ ಚತುರ್ಮುಖ ದರ್ಶನ.
ಅದರಲ್ಲಿ
ಮೊದಲನೆಯದಾಗಿ ಒಬ್ಬ ಸಂಶೋಧಕನಲ್ಲಿ ಇರಬೇಕಾದ
ಇತಿಹಾಸನಿಷ್ಠೆಯ ಮುಖವನ್ನು ಪರಿಚಯಿಸಿಕೊಳ್ಳೋಣ. ನಾರಾಯಣ ಪಂಡಿತರೇ ಹೇಳುವಂತೆ-
ಆಚಾರ್ಯಮಧ್ವರು
ಭರತಖಂಡದ ಉದ್ದಗಲವನ್ನೂ ಸಂಚರಿಸಿದವರು. ಎಷ್ಟೋ ಜನರು ಆಚಾರ್ಯರ ಸಂಪರ್ಕಕ್ಕೆ
ಬಂದಿರುವರು. ಅವರೆಲ್ಲರೂ ನೋಡಿದ್ದನ್ನು ಹೇಳಿದ್ದನ್ನು ನಾನು ಬರೆದಿಲ್ಲ. ಕೆಲವೊಂದು
ಘಟನೆಗಳು ಮಾನವನ ಬುದ್ಧಿಗೆ ನಿಲುಕದ್ದು ಎಂದು ನಾನೇ ಕೈಬಿಟ್ಟಿದ್ದೇನೆ.
ಇನ್ನು ಕೆಲವನ್ನು ಹೇಳುತ್ತಿದ್ದರೆ ಗ್ರಂಥವೇ ಮುಗಿಯದೆಂಬ ಭೀತಿಗೆ ನಿಲ್ಲಿಸಿದ್ದೇನೆ. ಹಲವು ಮಂದಿ ಒಂದೇ
ಕಥೆಯನ್ನು ತಿರುಚಿಲ್ಲದೇ ಹೇಳಿದ್ದಾರೆ, ಅದನ್ನು ಸಂಪೂರ್ಣವಾಗಿ ನಮೂದಿಸಿದ್ದೇನೆ. ನಾನು ದೇವರಾಣೆ ಕಂಡಿದ್ದೇನೆ
ಎಂದು ಹೇಳಿದವರ ಮಾತನ್ನು ಸ್ವೀಕರಿಸಿದ್ದೇನೆ. ಇಬ್ಬರ ಕಥಾಪ್ರಸ್ತುತಿಯಲ್ಲಿ ಏನಾದರೂ ವಿರೋಧ ಕಂಡುಬಂದರೆ, ಹೆಚ್ಚು ಪ್ರಮಾಣಗಳನ್ನು ಕೊಟ್ಟ ವ್ಯಕ್ತಿಯ ಕಥೆಯನ್ನು ಸ್ವೀಕರಿಸಿದ್ದೇನೆ. ಇನ್ನು ಕೆಲವು ಆಚಾರ್ಯರ ಅಂತರಂಗದ ಶಿಷ್ಯರು 'ನಮಗೆ ಗುರುಗಳು ಹೀಗೆ
ಹೇಳಿದ್ದರು ' ಎಂದು ಹೇಳಿದರೆ ಅದನ್ನು
ಸುಮ್ಮನೇ ಪರೀಕ್ಷೆಗೆ ಒಡ್ಡದೆ ಹೇಳಿಬಿಟ್ಟಿದ್ದೇನೆ.
ಕೊನೆಯದಾಗಿ
ನಾನು ಈ ಮಧ್ವವಿಜಯ ಮಹಾಕಾವ್ಯವನ್ನು
ನನ್ನ ಕವಿತಾಚಾತುರ್ಯ ಪ್ರದರ್ಶನಕ್ಕಾಗಿಯೋ, ಇದೊಂದು ದೊಡ್ಡ ಕಾವ್ಯವಾಗಬೇಕೆಂಬ ಆಸೆಯಿಂದಲೋ, ನನ್ನ ಗುರುವಿನ ಕೀರ್ತಿ
ಎಲ್ಲೆಡೆ ಹಬ್ಬಲಿ ಎಂಬ ಮತಪ್ರಚಾರದ ಗುಂಗಿನಲ್ಲೋ,
ಅವರೊಬ್ಬ ದೊಡ್ಡ ವ್ಯಕ್ತಿ ಎಂದು ನನ್ನ ಶಬ್ದಗಳಲ್ಲಿ ತೋರುವುದಕ್ಕೋ ರಚಿಸಿರುವುದಲ್ಲ. ದೊಡ್ಡವರು ತಮ್ಮ ಸೂಕ್ಷ್ಮದೃಷ್ಟಿಯಿತ್ತು ಹುಡುಕಿ ನೋಡಬಹುದು.
ಕೇಳಿದಿರಾ
ಕವಿಯ ಪ್ರಾಮಾಣಿಕತೆಯನ್ನು? ವಸ್ತುನಿಷ್ಠೆಯನ್ನು? ಮುಂದಿನ ಸಂಶೋಧಕ ಜನಾಂಗಕ್ಕೆ ಮಾದರಿಯಾಗಿ ನಿಂತುಬಿಟ್ಟರು. ನಮ್ಮ ಮಧ್ವವಿಜಯಭಾವಸಂಗ್ರಹಣೆಯ ಹಾದಿಯಲ್ಲಿ ಮೊತ್ತಮೊದಲು
ಇತಿಹಾಸದ ಭಾಗವನ್ನು ಸಂಗ್ರಹಿಸೋಣ. ಮುಂದೆ ಕಾವ್ಯಚಮತ್ಕಾರದ ಎರಡನೇ ಮುಖವನ್ನು ನೋಡೋಣ.
No comments:
Post a Comment