ಅಪಕ್ಷಪಾತೀ ಪುರುಷಸ್ತ್ರಿಲೋಕ್ಯಾಮ್-ಅಭೋಗ-ಭೋಕ್ತಾ ಪತಗಾಧಿ-ರಾಜಮ್ ।
ವಿಶ್ವಮ್ಭರಂ ಬಿಭ್ರದಸೌ ಜಿಗಾಯ ತ್ವರಾ-ಪರಾಕ್ರಾಂತಿಷು ಚಿತ್ರಮೇತತ್ ॥೦೧.೧೬॥
ಇವನು ವೇಗ ಹಾಗೂ ಪರಾಕ್ರಮದಲ್ಲಿ
ಗರುಡನನ್ನೇ ಗೆದ್ದ ಗಂಡು!
ವಿಚಿತ್ರ! ಲೋಕದಲ್ಲಿ ಹಾರುವ
ಹಕ್ಕಿಯನ್ನು ನಡೆವ ಪುರುಷನು ಗೆದ್ದದ್ದು!
ಇದಾದರೋ ಬರಿಯ ನಾಡು ಹಕ್ಕಿಯಲ್ಲ.
ಹಕ್ಕಿಗಳ ರಾಜ (ಪತಗಾಧಿರಾಜಮ್)
ಇವನೋ ಒಂದು ಕಪಿ. ಗರುಡನನ್ನು ಹೇಗೆ
ಗೆದ್ದ!?
ಗರುಡನಾದರೋ ‘ಪಕ್ಷಪಾತಿ’ (ಪಕ್ಷಗಳ
ಸಹಾಯದಿಂದ ಹಾರುವ), ಆದರೆ ಇವನು
ಪಕ್ಷಪಾತವಿಲ್ಲದ ಗಂಡು(ಅಪಕ್ಷಪಾತೀ ಪುರುಷಃ).
ನುಗ್ಗಿದ್ದು ವೈರಿಯ ರಾಜ್ಯಕ್ಕೆ, ಆದರೂ ಮಂಡೋದರಿ, ವಿಭೀಷಣರೇ ಮೊದಲಾದವರನ್ನು ಹಾಳು ಮಾಡದೆ, ಅವರವರ
ಯೋಗ್ಯತೆಯನ್ನು ತಿಳಿದು, ಗುಣಕ್ಕೆ ತಕ್ಕ ನಡೆಯನ್ನು ತೋರಿ, ಹಾಳುಗೆಡಬೇಕಾದ್ದನ್ನು ಹಾಳು ಮಾಡಿ ಬಂದ! ಮೂರುಲೋಕದಲ್ಲಿ ಇವನಿಗೆ ಸಮನಾದ ‘ಅಪಕ್ಷಪಾತೀ’
ಯಾರಿದ್ದಾರೆ?!
ಮತ್ತೆ, ಗರುಡನಾದರೋ ಭೋಗಗಳನ್ನು ತಿಂದು ಬದುಕುವನು.
ಭೋಗ ಎಂದರೆ ಹಾವಿನ ದೇಹ. ಆದ್ದರಿಂದ ಗರುಡ ‘ಭೋಗಭೋಕ್ತಾ’.
ಹನುಮನಾದರೋ ಭೋಗವನ್ನು ತೊರೆದ
ಬ್ರಹ್ಮಚಾರಿ! ಆದರಿಂದ ಇವನು ‘ಅಭೋಗಭೋಕ್ತಾ’ !
ಇವನೂ ಗರುಡನಂತೆ ವಿಶ್ವವನ್ನು ಹೊತ್ತ
ಸ್ವಾಮಿಯನ್ನು ಹೆಗಲಲ್ಲಿ ಹೊತ್ತಿರುವನು!
ನಿಜ ಸಂಗತಿ ಇದು - ಇವನು ಮೂಲತಃ
ಗರುಡನಿಗಿಂತ ಮೇಲಿನ ಯೋಗ್ಯತೆಯ ದೇವತೆ ಮುಖ್ಯಪ್ರಾಣ. ವಿಚಾರಿಸಿ ನೋಡಿದರೆ ಇದಾವುದೂ
ವಿಚಿತ್ರವಲ್ಲ. ನೋಡುವ ಕಣ್ಣಿಗೆ ಇದೊಂದು ವಿಚಿತ್ರ ಅಷ್ಟೇ!
ಇಲ್ಲಿ ಮತ್ತೆ ನಾವು ಸ್ವಲ್ಪ
ಶ್ಲೇಷವನ್ನು ತಿಳಿಯುವ ಪ್ರಯತ್ನ ಮಾಡುವ.
ಇಲ್ಲಿ ಬಂದ ಅಪಕ್ಷಪಾತೀ, ಅ- ಭೋಗಭೋಕ್ತಾ ಹಾಗೂ ವಿಶ್ವಮ್ಭರಂ
ಬಿಭ್ರದ್ ಈ ಶಬ್ದಗಳು ಪಾತ್ರಕ್ಕೆ ತಕ್ಕಂತೆ ವಾಕ್ಯಕ್ಕೆ ಹೊಸ ಅರ್ಥವನ್ನು ಕೊಟ್ಟವು.
ಕವಿಯ ಚಾತುರ್ಯಕ್ಕೆ ನಮನ.
ಛಂದಸ್ಸು ಪ್ರೇಮಾ ಎಂಬ
ಉಪಜಾತಿಪ್ರಭೇದ.
ಇದು, ಮರಳಿದ ಹನುಮನಿಗೆ ಏನನ್ನೂ ಕೊಡಲು
ಕಾಣದೆ ತನ್ನನ್ನೇ ಕೊಟ್ಟುಕೊಂಡ ರಾಮನ ಅನಿಮಿತ್ತಪ್ರೇಮ.
ತಾನು ಗರುಡನನ್ನೇ ಗೆದೆವ ತಾಕತ್ತಿನ
ವೀರ, ಸ್ವಾಮಿಯ ಮುಂದೆ ತಲೆಬಾಗಿ ನಿಂತು ಭಕ್ತಿಯಲ್ಲಿ ತೋದ ಕುವರ. ಇದೇ ದಾಸ ಈಶರ ಸಮಾಗಮ.
No comments:
Post a Comment